ಕರ್ನಾಟಕದ ಸಿಂಗಂ ಎಂದು ಕರೆಸಿಕೊಂಡಿದ್ದ ಕರ್ನಾಟಕ ಕೇಡರ್ನ ನಿವೃತ್ತ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ಸೇರಲಿದ್ದಾರೆ.
ಇಂದು ಮಧ್ಯಾಹ್ನ ಒಂದು ಗಂಟೆಗೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಲಿದ್ದು, ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಣ್ಣಾಮಲೈಯವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಫಲವಾಗಿದೆ.
ಕರ್ನಾಟಕದಲ್ಲಿ ಬೆಂಗಳೂರು, ಚಿಕ್ಕಮಗಳೂರು ಸೇರಿ ಹಲವೆಡೆ ಡಿಸಿಪಿ, ಎಸ್ಪಿಯಾಗಿ ಕಾರ್ಯ ನಿರ್ವಹಿಸಿ 2019ರ ಮೇ ತಿಂಗಳಿನಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ನಿವೃತ್ತಿ ನಂತರ ಕರೂರ್ ಮತ್ತು ಕೊಯಂಬತ್ತೂರಿನಲ್ಲಿ ಕೃಷಿಕರೊಂದಿಗೆ ಕೆಲಸ ಮಾಡುತ್ತಿದ್ದಾರೆ.
ಅಣ್ಣಾಮಲೈರವರು ನಿವೃತ್ತಿ ಘೋಷಿಸಿದಾಗಲೇ ಸಿಂಗಂ ಬಿಜೆಪಿ ಸೇರುತ್ತಾರೆ ಎಂದು ಹಲವರು ಊಹಿಸಿದ್ದರು. ಇನ್ನ ಕೆಲವರು ಅವರು ಬಿಜೆಪಿ ಸೇರವುದಕ್ಕಾಗಿಯೇ ರಾಜೀನಾಮೆ ನೀಡಿದ್ದಾರೆ ಎಂದು ಟೀಕಿಸಿದ್ದರು. ಆದರೆ ಆಗ ಅದನ್ನು ನಿರಾಕರಿಸಿದ್ದ ಅವರು ಕೊನೆಗೂ ಬಿಜೆಪಿ ಸೇರುವ ಮೂಲಕ ತಮ್ಮ ಟೀಕಾಕಾರರ ಊಹೆಯನ್ನು ನಿಜ ಮಾಡಿದ್ದಾರೆ.
ಬಿಜೆಪಿ ಸೇರುತ್ತಿರುವ ಅಣ್ಣಾಮಲೈಗೆ ಸಚಿವ ಡಾ.ಸುಧಾಕರ್ ಸೇರಿ ಹಲವರು ಟ್ವೀಟ್ ಮೂಲಕ ಸ್ವಾಗತ ಕೋರಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ ಅಣ್ಣಾಮಲೈ ಬಿಜೆಪಿ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.